ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರದ ಮೂಲಕ ಗಮನಸೆಳೆದಿದ್ದ ಕನ್ನಡದ ನಟ ಸರ್ದಾರ್ ಸತ್ಯ, ಈಗ ಸಣ್ಣ ಗ್ಯಾಪ್ನ ನಂತರ ಕನ್ನಡದಲ್ಲಿ ಮತ್ತೊಮ್ಮೆ ಬ್ಯುಸಿಯಾಗಿದ್ದಾರೆ. ಅವರು ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಪೈಕಿ ‘ಸೈಕಿಕ್’ ಎಂಬ ಚಿತ್ರದ ಟೀಸರ್, ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿದೆ.
ನಿವೃತ್ತ ಎಸಿಪಿಗಳಾದ ಬಿ.ಕೆ. ಶಿವರಾಂ, ಹನುಮಂತೇಗೌಡ್ರು, ಎಸ್.ಕೆ. ಉಮೇಶ್, ನಿರ್ದೇಶಕ ಕೆ.ಎಂ.ಚೈತನ್ಯ, ನಿರ್ಮಾಪಕ ದೇವೇಂದ್ರರೆಡ್ಡಿ, ಮಂಜುನಾಥ್, ಸರ್ದಾರ್ ಸತ್ಯ, ಹಂಸ ಪ್ರತಾಪ್ ಮುಂತಾದವರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಯಾಗಿದೆ.
10ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಪುಷ್ಕರ್ ಗಿರಿಗೌಡ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ನಿರ್ದೇಶಕ ಪುಷ್ಕರ ಗಿರಿಗೌಡ ಮಾತನಾಡುತ್ತ ‘ಕ್ರೈಮ್, ತನಿಖೆ ಎಂದರೆ ರಕ್ತಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮತ್ತು ಶಬ್ದ ವಿನ್ಯಾಸ ಬೆಂಬಲ ನೀಡಿವೆ. ಇಲ್ಲಿ ಮೂರು ರೀತಿಯ ಲವ್ ಸ್ಟೋರಿಗಳನ್ನು ಹೇಳಿದ್ದೇವೆ. ಚಿತ್ರದ ಹಲವಾರು ಮುಖ್ಯ ಅಂಶಗಳನ್ನು ಟೀಸರ್ ನಲ್ಲಿ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇದ್ದರೂ ಅದರ ಜೊತೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಸರ್ದಾರ್ ಸತ್ಯ ಮಾತನಾಡಿ, ತಾನು ಮಾಡಿರದ ಹೊಸತನದ ಪಾತ್ರ ಈ ಚಿತ್ರದಲ್ಲಿ ಮಾಡಿರುವುದಾಗಿ ಹೇಳಿದರು. ಹಂಸ ಪ್ರತಾಪ್ ಅವರಿಗೆ ಪೊಲೀಸ್ ಪಾತ್ರ ಮಾಡಬೇಕೆನ್ನುವುದು ನನ್ನ ಬಹುದಿನಗಳ ಕನಸಾಗಿತ್ತಂತೆ. ಅದು ಈ ಚಿತ್ರದಲ್ಲಿ ನೆರವೇರಿದ್ದಾಗಿ ಹೇಳಿಕೊಂಡರು.
ಸತ್ಯ ಮತ್ತು ಹಂಸಾ ಪ್ರತಾಪ್ ಅಲ್ಲದೆ, ರಮೇಶ್ ಭಟ್, ‘ರಥಸಪ್ತಮಿ’ ಅರವಿಂದ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ.
‘ಸೈಕಿಕ್’ ಚಿತ್ರವನ್ನು ಸಿಲ್ಕ್ ಸಿನಿಮಾಸ್ನಡಿ ಚೇತನ್ ಮಂಜುನಾಥ್ ನಿರ್ಮಿಸಿದ್ದಾರೆ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments