‘ರಾಜಹಂಸ’ ಖ್ಯಾತಿಯ ಗೌರಿಶಂಕರ್ ಅಭಿನಯದ ‘ಕೆರೆಬೇಟೆ’ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿತ್ತು. ಈಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಕೈಗೆ ಖಡ್ಗ, ಕುತ್ತಿಗೆಗೆ ವರಾಹದ ಪೆಂಡೆಂಟ್ ತೊಟ್ಟು, ಹಿರಿಕಿರಿಯರ ಮಧ್ಯೆ, ನಾಯಕ ಬುಟ್ಟಿಯಂತಹ ಬಲೆ ಹಿಡಿದು ಕೆರೆಗೆ ಹಾರಿ ಬೇಟೆಗೆ ಅನುವಾಗುವ ಈ ಮೋಷನ್ ಪೋಸ್ಟರ್ ಈಗಾಗಲೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.
ಮಲೆನಾಡ ಭಾಗದ ಒಂದು ವಿಶಿಷ್ಟ ಸಂಪ್ರದಾಯ ಕೆರೆಬೇಟೆ. ವರ್ಷಕ್ಕೊಮ್ಮೆ ದೊಡ್ಡ ಕೆರೆಗಳಲ್ಲಿ ಮೀನು ಬೇಟೆಯಾಡುವ ಈ ವಿಶಿಷ್ಟ ಪದ್ಧತಿಯನ್ನು ಮೂಲವಾಗಿಟ್ಟುಕೊಂಡು ಗೌರಿಶಂಕರ್, ‘ಕೆರೆಬೇಟೆ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕನಾಗಿಯೂ ಅಭಿನಯಿಸಿದ್ದಾರೆ.
‘ಕೆರೆಬೇಟೆ’ ಚಿತ್ರವನ್ನು ಬರೆದು ನಿರ್ದೇಶಿಸಿರುವುದು ರಾಜ್ಗುರು. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಎ.ಆರ್ ಬಾಬು, ಪವನ್ ಒಡೆಯರ್ ಹಾಗೂ ಇತರೆ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ರಾಜ್ ಗುರು ಅವರಿಗಿದೆ. ಇದೀಗ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಿರ್ದೇಶನದ ಜೊತೆಗೆ ಕಥೆಯನ್ನೂ ಅವರು ಬರೆದಿದ್ದಾರೆ.
ಗೌರಿಶಂಕರ್ ಈ ಚಿತ್ರವನ್ನು ಅವರು ಜೈ ಶಂಕರ್ ಪಟೇಲ್ ಜೊತೆಗೆ ಸೇರಿ ಜನಮನ ಸಿನಿಮಾ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರ್ ಛಾಯಾಗ್ರಹಣ ಮಾಡಿದ್ದಾರೆ.
ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸೊರಬ, ಸಿಗಂದೂರು ಮುಂತಾದ ಕಡೆ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜನವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments